ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರ, ಉಡುಪಿ ಜಿಲ್ಲೆ ||
Sri Kundeshwara Temple, Kundapura TQ, Udupi Dist.
Sri Kundeshwara Swamy |
ಇತಿಹಾಸಗಳ
ಪ್ರಕಾರ ಕುಂದಾಪುರವನ್ನು ಆಳಿದ ರಾಜ ಕುಂದವರ್ಮನು(Kundavarma) ಶಿವಭಕ್ತನಾಗಿದ್ದು, ತನ್ನ ಅವಧಿಯಲ್ಲಿ
ಕುಂದಾಪುರದಲ್ಲಿ ಕುಂದೇಶ್ವರ ದೇವರನ್ನು ಪ್ರತಿಷ್ಠಾಪಿಸಿದನೆಂದು ತಿಳಿದುಬರುತ್ತದೆ. ಅಲ್ಲದೆ ಅವನ
ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ ಪರಮೇಶ್ವರನಿಗೆ 'ಕುಂದ+ಈಶ್ವರ=ಕುಂದೇಶ್ವರ' ಎಂದು ಹೆಸರಿಸಲಾಗಿದೆ ಎಂಬುದು
ಇತಿಹಾಸದ ತಿರುಳು. ಅಲ್ಲದೇ ಹಿಂದೆ ಕುಂದನಾಡು ಎಂಬುದು 'ಕುಂದಪುಷ್ಪ(ಕಾಕಡ ಮಲ್ಲಿಗೆ)' ಬೆಳೆಯ ನಾಡಗಿದದ್ದು
ತರುವಾಯ ಈ ಪುಷ್ಪದಿಂದಾಗಿ ಈ ಊರಿಗೆ 'ಕುಂದಾಪುರ'
ಎಂದೂ ಹೆಸರು ಬಂದಿತು ಎಂಬುದು ಹಿರಿಯರ ಅಭಿಪ್ರಾಯವಾಗಿದೆ. ಅದೇನಾದರೂ ಶ್ರೀ ಸ್ವಾಮಿ ಕುಂದೇಶ್ವರನು
ನೆಲೆಸಿನಿಂದಿರುವ ಕುಂದಪುಷ್ಪದ ನಾಡು ಇಂದು ಪ್ರಜ್ವಲವಾಗಿ ಬೆಳಗುತ್ತಿರುವುದಂತೂ ಸತ್ಯ ಸಂಗತಿ.
ಕುಂದಾಪುರ
ಇಂದು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಪ್ರಾಕೃತಿಕವಾಗಿ ಅಲ್ಲದೇ ಯಕ್ಷಗಾನ,
ನಟನೆ,
ಸಂಗೀತ, ಸಾಹಿತಿಗಳು.......... ಹೀಗೆ ಎಲ್ಲಾಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿದೆ. ಶೈಕ್ಷಣಿಕವಾಗಿ
ಮುಂದುವರೆದ ಉಡುಪಿ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರವಾಗಿಯೂ ಇಂದು ಜನಜನಿತವಾಗಿದೆ. ಕುಂದವರ್ಮನಿಂದ
ಆಳಲ್ಪಟ್ಟ ಕುಂದನಾಡು ತನ್ನದೇ ಆದಂತಹ ವಿಶಿಷ್ಟವಾದ 'ಕುಂದಗನ್ನಡ' (Kundagannada) ಎಂಬ ಭಾಷೆಯನ್ನು ಹೊಂದಿದೆ. ಈ ಕುಂದಗನ್ನಡವು
ಮಾತನಾಡಲು, ಆಲಿಸಲು ಸುಮಧುರವಲ್ಲದೇ ಹಲವಾರು ಪದಗಳು ಹಳೆಗನ್ನಡವನ್ನೇ ನಮಗೆ ನೆನಪಿಸುತ್ತವೆ. ಮೂಲ
ಹಳಗನ್ನಡದ ಪದಗಳೇ ಹೆಚ್ಚಾಗಿ ಕಾಣಸಿಗುವ ಕುಂದಗನ್ನಡವೂ ಇಲ್ಲಿನ ಮೂಲಭಾಷೆಯಾಗಿ ಹಾಸುಹೊಕ್ಕಾಗಿದೆ.
ಇಲ್ಲಿನ ಜನರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ತಾವೂ ಮಾತನಾಡುವ ಪದಗಳ ಮೂಲಕ ತಮ್ಮವರೇ ಎಂಬ ಬೆಸುಗೆ
ಬೆಸೆಯಲು ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ.
Temple Veiw |
ಹೀಗೆ
ಶ್ರೀ ಕುಂದೇಶ್ವರ ದೇವಸ್ಥಾನವು ಕುಂದಾಪುರ ಹೃದಯ ಭಾಗದ ಮಧ್ಯದಲ್ಲಿ ಇದ್ದು ಶ್ರೀ ದೇವಳದ ಮುಖಮಂಟಪ
ಮುಖ್ಯರಸ್ತೆಯಲ್ಲಿ ಕಂಗೊಳಿಸುತ್ತದೆ. ಇಲ್ಲಿ ಶ್ರೀ ದೇವರ ಲಿಂಗವನ್ನು ರುದ್ರಾಕ್ಷಿ ಶಿಲೆಯಿಂದ ಮಾಡಲಾಗಿದ್ದು
ದೇವರ ಲಿಂಗವು ಒರಟಾದ ಅನುಭವವನ್ನು ನೀಡುತ್ತದೆ. ಶ್ರೀ ಕುಂದೇಶ್ವರ ದೇವರೊಂದಿಗೆ ಸತೀ ಆದಿಶಕ್ತಿ
ಪಾರ್ವತಿ
ಮತ್ತು ಗೌರಿಸುತ ಗಣೇಶನೂ ಕೂಡಾ ನೆಲೆಯಾಗಿ ನಿಂದಿದ್ದಾರೆ. ಶ್ರೀ ದೇವರ ಮುಂಭಾಗದಲ್ಲಿ ನಂದಿಮಂಟಪವಿದ್ದು,
ನಂದಿಯನ್ನು ಸುಂದರವಾಗಿ ಕಲಾತ್ಮವಾಗಿ ಕೆತ್ತಲಾಗಿದೆ. ನೂತನವಾಗಿ ನಿರ್ಮಾಣವಾದ ಶ್ರೀ ವಿನಾಯಕ ಮತ್ತು
ಶ್ರೀ ಪಾರ್ವತಿ(ದುರ್ಗಾಪರಮೇಶ್ವರೀ) ಅಮ್ಮನವರ ವಿಗ್ರಹವೂ ಅತ್ಯಂತ ಮನಮೋಹಕವೂ, ವಿಸ್ಮಿತವೂ ಆಗಿ ರೂಪುಗೊಂಡಿದೆ.
ದೇವಾಲಯದ ಹೊರ ಪ್ರಕಾರದಲ್ಲಿ ಶ್ರೀ ನಾಗದೇವರು, ಶ್ರೀ ಅಯ್ಯಪ್ಪಸ್ವಾಮಿಯ ಗುಡಿಗಳಿವೆ. ಹಾಗೇ ಆದಿಶಂಕರಾಚಾರ್ಯರ
ಒಂದು ಪುಟ್ಟ ಗುಡಿಯಿದೆ. ಶ್ರೀ ಕುಂದೇಶ್ವರ ದೇವಳದಲ್ಲಿ ಧ್ವಜಸ್ಥಂಬವಿಲ್ಲ. ಆದಕಾರಣ ಇಲ್ಲಿ ರಥೋತ್ಸವದ
ಬದಲಿಗೆ 'ದೀಪೋತ್ಸವ'(Deepothsava)
ವನ್ನು ನಡೆಸಲಾಗುತ್ತದೆ ಎಂದು ಹಿರಿಯರು ಅಭಿಪ್ರಾಯ ಪಡುತ್ತಾರೆ. ಆದರೆ ಇತ್ತೀಚೀನ ದಿನದಲ್ಲಿ ದೀಪೋತ್ಸವದ
ದಿನದಂದು ಸಣ್ಣ ಕಾಷ್ಠ ಹೂವಿನರಥದಲ್ಲಿ ಶ್ರೀ ಸ್ವಾಮೀಯನ್ನು ಇರಿಸಿ ದೇವರನ್ನು ಎಳೆಯಲಾಗುತ್ತದೆ.
Shiva in Pushakarani |
ಹೀಗೆ
ದೀಪೋತ್ಸವದ ದಿನ ಕಟ್ಟೆಪೂಜೆಯೂ ಬಹು ವಿಜೃಂಭಣೆಯಿಂದ ನಡೆಯುತ್ತದೆ. ಶ್ರೀ ದೇವರು ನಗರದ ಪ್ರಮುಖ ಬೀದಿಗಳಲ್ಲಿ
ಸಂಚರಿಸಿ, ಅಲ್ಲಲ್ಲಿ ಭಕ್ತಾಧಿಗಳ ಪೂಜೆಗಳನ್ನು ಸ್ವೀಕರಿಸಿ ಪುನಃ ದೇವಳವನ್ನು ಪ್ರವೇಶಿಸುತ್ತಾನೆ.
ಹೀಗೆ ದೇವಸ್ಥಾನದ ಎದುರಿಗೆ ಒಂದು ಸುಂದರವಾದ ಪುಟ್ಟ ಪುಷ್ಕರ್ಣಿಯು ಬಲು ಮನಮೋಹಕವಾಗಿ ಕಂಗೊಳಿಸುತ್ತದೆ.
ಈ ಪುಷ್ಕರಣಿಯ ಮಧ್ಯೆ ನಿರ್ಮಿಸಲಾದ ಶಿವನ ಧ್ಯಾನಸ್ಥ ಸಿಮೆಂಟ್ ಮೂರ್ತಿಯೂ ಅತ್ಯಂತ ಚಿತ್ತಾಕರ್ಷಕವಾಗಿದೆ.
ಶ್ರೀ
ದೇವಳದಲ್ಲಿ ಕಾರ್ತಿಕ ಮಾಸದಲ್ಲಿ ದೀಪೋತ್ಸವ ನಡೆಯುತ್ತದೆ. ದೀಪೋತ್ಸವದ ದಿನ ದೇವಳದಲ್ಲಿ ಲಕ್ಷಾನುಲಕ್ಷ
ಹಣತೆ ದೀಪವನ್ನು ಬೆಳಗುವ ಮೂಲಕ ಶ್ರೀ ದೇವರಿಗೆ ದೀಪೋತ್ಸವನ್ನು ನಡೆಸಲಾಗುತ್ತದೆ. ಭಕ್ತಾದಿಗಳು ಹಣತೆಯನ್ನು
ಬೆಳಗಿ ಶಿವನ ಅನುಗ್ರಹವನ್ನು ಪಡೆಯುತ್ತಾರೆ. ಅಲ್ಲದೇ ಈ ದೇವಳವು ಶೃಂಗೇರಿಯ ಸಂಪರ್ಕವನ್ನು ಹೊಂದಿದ್ದು
ಇಲ್ಲಿಗೂ - ಶೃಂಗೇರಿಗೂ ಅವಿನಾಭಾವ ಸಂಬಂಧಗಳು ಕಂಡುಬರುತ್ತದೆ. ಇಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು
ನಡೆದಿದ್ದು ಒಂದು ಸುಂದರ ಮಂದಿರವಾಗಿ ಇಂದು ಕಂಗೊಳಿಸುತ್ತಿದೆ. ಭಕ್ತಾದಿಗಳು ಕುಂದನಾಡಿನ ಅದಿದೇವರಾದ
ಶ್ರೀ ಕುಂದೇಶ್ವರನನ್ನು ಒಮ್ಮೆ ದರ್ಶನಮಾಡಿ ಶ್ರೀ ದೇವಿಯ ಒಡೆಯ ಮಹಾದೇವನ ಅನುಗ್ರಹಕ್ಕೆ ಪಾತ್ರಾರಾಗಿ.
ವಿಳಾಸ :-
ಶ್ರೀ
ಕುಂದೇಶ್ವರ ದೇವಸ್ಥಾನ,
ಕುಂದಾಪುರ,
ಉಡುಪಿ ಜಿಲ್ಲೆ, ಕರ್ನಾಟಕ.
ದಾರಿಯ ವಿವರ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕು
ಕೇಂದ್ರದ ಹೃದಯಭಾಗದಲ್ಲಿ ಶ್ರೀ ದೇವರ ದೇವಾಲಯವು ಭವ್ಯವಾಗಿ ಕಂಗೊಳಿಸುತ್ತದೆ.